Showing posts with label Rediscovery. Show all posts
Showing posts with label Rediscovery. Show all posts

Saturday, June 4, 2022

ಹೊಸ ಆಕಾಶ

 ಏಕಾಣುವಾಗಿರಲು ಅನಂತದ ಅನುಭವವು,

ಬೆಳೆದಂತೆ ತಿಳಿಯಿತು ಅದು ನಮ್ಮ ರಕ್ಷಣೆಯು,

ಸುತ್ತಲೂ ಕೋಟೆಯಂತೆ, ಅದುವೇ ಮೊಟ್ಟೆಯಂತೆ,

ಸೀಳಿ ಹೊರಬಂದು ಚೀರಿದರೆ ಜನ್ಮವಂತೆ.


ಕಣ್ಣು ಕಾಣಿಸದು, ರೆಕ್ಕೆ ಬಲಿತಿಲ್ಲ,

ಅವಲಂಬನೆಯೇ ಜೀವನ, ಬೇರೆ ಗತಿಯಿಲ್ಲ,

ಹೊಸ ಜಗದ ಇರುವು ತಿಳಿಯಿತು ಈಗ,

ಅದನು  ನೋಡುವ ತವಕ ಆದಷ್ಟು ಬೇಗ.


ರೆಕ್ಕೆ ಬಲಿತು ಹಕ್ಕಿಯು ಗೂಡು ಬಿಟ್ಟಿತು,

ಸ್ವಾತಂತ್ರ್ಯಕೆ ಬೀಗಿ ನೂರ್ಮಡಿ ಖುಷಿ ಪಟ್ಟಿತು.

ಹೊಸ ಆಗಸದ, ಹೊಸ ಜೀವನದ ಕನಸು ಕಟ್ಟಿತು,

ದಿನವೂ ಜೀವಿಸಿ, ದಿನವ ಸವೆಸಿ ಸೋತು ಬಿಟ್ಟಿತು.


ನಿತ್ಯವೂ ಹೊಸತಿನ ಎಣಿಕೆ, ಹಸನಾದ ಜೀವನ,

ಕನಸಲ್ಲಿ ಕಂಡ ಜಗದ ತುಣುಕಿನ ಮನನ,

ಆದರೆ ಯಾಂತ್ರಿಕವಿದು, ಅದೇ ಅನುರಣನ,

ಅದೇ ಹುಟ್ಟು, ಅದೇ ತುಡಿತ, ಅದೇ ಮರಣ.


ದಿನಗಳು ಉರುಳುವುವು, ಕಾಲವೂ ಕಳೆಯುವುದು,

ಕಸುವು ತೀರುವುದು, ಮುಪ್ಪು ಅಡರುವುದು,

ಹೊಸ ಜಗದ ಆಸೆಯ ನೆನಪೇ ದಾರುಣ,

ಹೇಗೆ ಮಾಡುವುದು ಅದರ ಪುನರಾನ್ವೇಷಣ.


ತಿರುಗುವ ಸುಳಿಯಂತಾಗಲು ಉಸಿರು ಕಟ್ಟುವ ಭಾಸ,

ಏನು ಹೊಸತು ಮಾಡಲಿ? ಸೋಲಿನ ಆಭಾಸ,

ಎಲ್ಲರ ಕಥೆಯೇ ಇದು, ನಾ ಹೇಗೆ ಬೇರೆಯಾಗಲಿ?

ಏನು ಹುಡುಕಲಿ, ಏನು ಮಾಡಲಿ, ಸಾರ್ಥಕತೆಯ ಹೇಗೆ ಕಾಣಲಿ?


ಈ ಯೋಚನೆಯೇ ಭವಸಾಗರದಂತಾಯಿತು ,

ಅನಂತದ ಅನುಭವವು, ಯುಕ್ತಿಯಲಿ ತಿಳಿಯಿತು,

ಯೋಚನೆಗಳೇ ನಮ್ಮ ಮೊಟ್ಟೆ, ಸೀಳಿದರೆ ಜನ್ಮ,

ಕಟ್ಟುತಲಿರಬೇಕು, ಸೀಳುತಲಿರಬೇಕು, ಪಡೆಯಬೇಕು ಪುನರ್ಜನ್ಮ.


ಯೋಚನೆಗಳ ಬೇಲಿಯಲಿ  ಬಂದಿಯಾದರೆ,

ಹೊಸತೆನ್ನುವುದು ಜೀವನದಲಿ ಬಿಸಿಲ್ಗುದುರೆ,

ಕೊಂಚವೇ ಧೈರ್ಯದಲ್ಲಿ, ಮೊಟ್ಟೆಯನು ಸೀಳುವೆ,

ಹೊಸ ಕನಸಿನ ಹೊಸ ಆಗಸಕೆ ನಾ ಹಾರುವೆ.


Monday, January 13, 2020

ಪುನರ್ಮಿಲನ

ನಿನ್ನ ಭೇಟಿಯ ಹೊಸತಿನಲ್ಲಿ ಚಿಮ್ಮಿದೆ ಉತ್ಸಾಹ,
ಎಷ್ಟು ಬೆರೆತರೂ, ಹರಟೆ ಹೊಡೆದರೂ ತೀರದ ದಾಹ,
ನನಗೆ ನೀನು, ನಿನಗೆ ನಾನು, ಮೋಹ ಪರಸ್ಪರ,
ನವನವೀನ ಮಜಲುಗಳ ಅನ್ವೇಷಣೆ, ಸಂಬಂಧ ಸಾರ.

ಆನಂದದ ಉನ್ಮಾದಕೆ ಕಾರಣವಾಗಿದೆ ಸಖ್ಯ,
ಪರಸ್ಪರ ಆಸರೆ ಇಲ್ಲದಿರೆ ಜೀವನ ಅಶಕ್ಯ.
ಒಬ್ಬರಿಗೊಬ್ಬರು ಪೂರಕ, ಅಪೂರ್ವ ಸಂಗಮ,
ಒಬ್ಬರಿಂದ ಇನ್ನೊಬರಾಗಿ ಪರಿಪೂರ್ಣತೆಯ ಜನುಮ.

ಸಾರ್ಥಕತೆಯ ಭಾವವು ಶಿಖರವೇರಿ ನಿಂತಿದೆ,
ಎಷ್ಟು ದಿನದ ಜಾತ್ರೆಯಿದೋ ಎಂದು ಮನವು ಅದುರಿದೆ,
ಎಣಿಕೆಯ ತಪ್ಪದೆ ಕವಲುದಾರಿ ಬಂದಿದೆ,
ಬೇರ್ಪಡೆಯೇ ಅಂತಿಮವೆಂದು ನಿರ್ಧಾರವಾಗಿದೆ.

ನನಗಾದರೆ ಧರ್ಮದ ಹೊರೆಯು, ಜಗನಿಯಮದ ಕಾವಲು,
ನಿನಗೇನಿತ್ತು ಕಾರಣ ಸಂಬಂಧವ ಮುರಿಯಲು?
ಸಮಯದ ಅಭಾವದಲಿ ವಿರಹದ ಮುನ್ನುಡಿ,
ನಿನ್ನ ಬಿಟ್ಟು ಇರಬಲ್ಲೆ - ಅರಿವಾಯಿತೆ ಜಾಣ್ಣುಡಿ.

ನಾನೇನೋ ಹರಿವ ನದಿಯಂತಿರುವೆ, ನಿಲ್ಲಲಾರೆ,
ಬಾ ಎಂದು ಕರೆದವರೊಡನೆ ಹೋಗದೆ ಇರಲಾರೆ,
ನಿನ್ನ ಧರ್ಮದ ಅರ್ಥ ನನಗೆ ತಿಳಿಯದು,
ನನಗಾರ ಅನಿವಾರ್ಯತೆಯಿಲ್ಲ, ನಿನಗೆ ತಿಳಿಯದು.

ಧರ್ಮವೋ, ನೆಪವೋ, ವಸ್ತುಸ್ಥಿತಿಯೋ, ಆಲಸ್ಯವೋ,
ಕಾಲಚಕ್ರದ ಹೊಡೆತಕೆ ಎಲ್ಲ ನೆಪವೂ ಮಾಯವೋ,
ನೀ ಬೇರೆ ಹೋದ ಮೇಲೆ ಏನಾಯಿತೋ ತಿಳಿಯದು,
ನಿನ್ನ ಬೇರೆಯವರ ಜೋಡಿ ನೋಡಿ ವೇದನೆಯೇ ಮುಗಿಯದು.

ಧರ್ಮವೂ ಅಲ್ಲ, ನಿಯಮವೂ ಅಲ್ಲ,
ಅರಿವಾಯಿತೆನಗೆ ನನ್ನ ಆಲಸ್ಯವೇ ಇದೆಲ್ಲ,
ನೀ ಎಷ್ಟಾದರೂ - ಪದ, ನುಡಿ, ಭಾಷೆ,
ನಿನಗಾರೂ ಅನಿವಾರ್ಯವಲ್ಲ, ಅದೇ ತಮಾಷೆ.

ಈ ಅರಿವಿನಲ್ಲಾಯಿತು ಮತ್ತೊಮ್ಮೆ ಅನ್ವೇಷಣೆ,
ಮತ್ತೆ ಚಿಮ್ಮಿದ ಉತ್ಸಾಹ, ತೀರದ ದಾಹ,
ಮತ್ತೆ ಪರಸ್ಪರ ಮೋಹದಿಂದ ಸಂಬಂಧ ಶುರುವಾಯಿತು,
ಪುನರ್ಮಿಲನಕೆ ಸಾಕ್ಷಿಯಾಗಿ ಈ ಕವಿತೆ ಹುಟ್ಟಿತು.