Saturday, August 1, 2009

ಅನ್ವೇಷಣೆ

ಹೆಜ್ಜೆಯ ಮೇಲೊಂದು ಹೆಜ್ಜೆಯನಿಡುತ,

ಇಲ್ಲದಿರುವುದನು ಪಡೆಯುವ ತುಡಿತ,

ಇರುಳಿನ ಕನಸನು ಪಡೆಯುವ ಹವಣಿಕೆ,

ಕೈಗೆಟುಕದ ಕನಸನು ಗೆಲ್ಲುವ ಚಡಪಡಿಕೆ.

ಆಸೆಗಳ ನಿಧಿಯುಂಟು ಹೃದಯಾಂತರಾಳದಲಿ,

ಕನಸುಗಳ ಹೆಪ್ಪುಂಟು ಆಸೆಯ ಮೊಸರಿನಲಿ,

ಅಕ್ಷಯ ಪಾತ್ರೆಯಿದು ಮೊಸರು ಮುಗಿಯಲಾರದು,

ಸತ್ತರೆ ಮತ್ತೊಂದು ಜನಿಸುವ ಜಾತಿಯಿದು.

ಜೀವನದ ರಸವಿದು ಆಸೆ ಕನಸಿನ ಮಿಲನ,

ಬೆಳವಣಿಗೆಯ ನಾಂದಿಯಿದು ಹುಮ್ಮಸ್ಸಿನ ಸಿಂಚನ,

ಧ್ಯೇಯವಾಗಿ ಹಾರುತ ಪೀಳಿಗೆಗಳ ನಡುವೆ,

ತುಡಿತಕೆ ಬಲಿಯಾಗಿ ಶತಮಾನಗಳೇ ಕಳೆದಿವೆ.

ಜೀವನದ ಓಟದಲಿ ಇಲ್ಲದಿರುವುದರ ಆಸೆಗೆ,

ಜೊತೆಗಿರುವ ನಿಧಿಯನು ಸರಿಸುವೆವು ಬದಿಗೆ.

ಹುಚ್ಚೆದ್ದು ಪಡೆದ ಕನಸಿನ ಖುಷಿಗೆ,

ಆಯಸ್ಸು ಮುಂದಿನ ಇರುಳಿನವರೆಗೆ.

ಜೀವನವಿದು ಬರಿಯ ಹುಚ್ಚು ಓಟವೇ?

ತೃಪ್ತಿಯ ಆಸ್ವಾದನೆಗೆ ಸಮಯವು ಬೇಡವೇ?

ನನಗಿಂದು ಜಗವು ಓಟದ ಸಂತೆಯಾಗಿಹುದು,

ಜಗವು ನನ್ನನ್ನು ಮರಳನೆಂದು ಕರೆದಿಹುದು.

ಹಾರುವ ಎತ್ತರದ ಎಣಿಕೆಯಿರಬೇಕು,

ಕನಸುಗಳ ಒಡನಾಟಕೆ ಬೇಲಿಯಿರಬೇಕು.

ಕ್ಷಣಕ್ಷಣದ ಕಷ್ಟದಲಿ ಗುರಿಯನೇ ಕಾಣುತಾ,

ಗೆದ್ದ ಪ್ರತಿಕ್ಷಣದಿ ತೃಪ್ತರಾಗಿ ತೇಲುತಾ.

ಮುಂದಿನ ಕನಸಿಗೆ ಹೇಳಿರಿ ನಿಲ್ಲೆಂದು,

ಈಗಷ್ಟೆ ಗೆದ್ದಿರುವೆ ಹಿಂದಿನ ಕನಸೊಂದು.

ಜೊತೆಗಿರುವ ಆಸ್ತಿಯಲ್ಲವೇ ಅಮೂಲ್ಯ,

ಮರೆಯಬೇಡಿ ಆಪ್ತರನು ಇಂತಹ ಸಮಯ.

ಕನಸಗಳ ಕಾಣುವುದು ತಪ್ಪಿರಲಾರದು,

ತ್ರುಷೆಯಿರದ ಜನರಿಂದ ಜಗವು ನಡೆಯಲಾರದು,

ನಾಳಿನ ತುಪ್ಪದಾಸೆಗೆ ಚೆಳಬೇಡಿ ಕೈಯಲ್ಲಿನ ಬೆಣ್ಣೆ,

ತಪ್ಪಲ್ಲವೇ ಬರಿಯ ಕನಸುಗಳ ಹುಚ್ಚು ಅನ್ವೇಷಣೆ?