Monday, September 2, 2013

ಬ್ರಹ್ಮ-ವಿಷ್ಣು-ಶಿವ

ಸೃಷ್ಟಿಯ ವೃತ್ತದಲಿ ಸೃಷ್ಟಿಯೇ ಅಂತ್ಯವು,
ನಡುವಿನ ಲಯದಲೇ ಸೃಷ್ಟಿಯ ಸ್ಫೂರ್ತಿಯು,
ಬ್ರಹ್ಮನಾಗಿ ಸೃಷ್ಟಿಸಿದೆ, ಲಯಕಾಗಿ ಶಿವನಾದೆ,
ಸೃಷ್ಟಿ-ಲಯದ ಸಾರ್ಥಕತೆಗಾಗಿ ವಿಷ್ಣುವಾದೆ.

ಜ್ಞಾನದ ಸೊಡರು ಹಿಡಿದು ಜ್ಞಾನಬೀಜವ ಬಿತ್ತಿ,
ವಿಜ್ಞಾನವ ಬೆಳೆದು ಮೂಡಿಸಿದೆ ಭವಿಷ್ಯದ ಭಿತ್ತಿ.
ಐಲೈಲು ಮನಸುಗಳಿಗೆ ಮಾಯೆಯ ಸುತ್ತಿ,
ಬ್ರಹ್ಮನಾಗಿ ಸೃಷಿಸಿದೆ ಮಾನವನಿಗೊಂದು ಮಿತಿ.

ಲಯದ ಭೀಕರತೆಗೆ ಮಾನವನು ಅದುರಿದನು,
ಭಯದ ಬಿಂಬದಲಿ ಭಕುತಿಯನು ಕಂಡಿಹನು,
ತನ್ನ ಧ್ಯಾನದಲಿ ಮಗ್ನನಾಗಿ ಶಿವನು ಕುಳಿತಿಹನು,
ಮಾನಸ ಸರೋವರದ ತಟದಿ ಕೈಲಾಸವ ಕಟ್ಟಿಹನು.

ಸ್ಥಿತಿಯ ಶಾಂತತೆಯಲಿ ವೈಕುಂಠದ ಗುಟ್ಟಡಗಿಸಿ,
ಬಾಳಿನುದ್ದಕೂ ಹಣರೂಪಿ ಲಕುಮಿಯನೇ ಅರಸಿ,
ವಿಷ್ಣುವಾಗಿ ಮಲಗಿಹೆ ನಿನಗೆ ಲಕುಮಿಯೇ ಅರಸಿ,
ಕ್ಷೀರ ಸಾಗರಕೆ ಬರಬೇಕು ನಾವು ನಿನ್ನನರಸಿ.

ಕಾಣದ ಕ್ರಿಮಿಯಾಗಿ ಹುಟ್ಟಿ ಮಾನವನಾದರೂ,
ಜ್ಞಾನದ ಮೆಟ್ಟಿಲುಗಳನು ಏರುತಾ ಹೋದರೂ,
ಅರ್ಥೈಸಲಾಗದ ಒಗಟುಗಳಿನ್ನೂ ಇರಲು,
ಭಾರ ದಾಟಿಸಲು ಬೇಕು ಭಗವಂತನ ಹೆಗಲು.

ಭಯವು ದಾಟಿದ ಭಕ್ತಿಯಲಿ ಆನಂದವು ತುಳುಕಿಹುದು,
ಜಂಜಡವಾದ ಬದುಕಿನಲಿ ಸಮಾಧಾನವ ತಂದಿಹುದು,
ಸಂಪೂರ್ಣ ಸಮರ್ಪಣೆಯಲಿ ಮದವು ಇಳಿದಿಹುದು,
ನಿಶ್ಕಲ್ಮಶ ಮನಸು ಪ್ರೀತಿಯನು ಹರಡಿಹುದು.

ಜ್ಞಾನದ ಬಾಗಿಲುಗಳನು ತೆಗೆಯುತಾ ಮನವು,
ವಿಚಿತ್ರ ಅನ್ವೇಷಣೆಗಳನು ಸೃಷ್ಟಿಸಿದೆ ಮನವು,
ಸೃಷ್ಟಿಯ ಚಕ್ರದ ಆದಿಯನು ಹಾಡಿದೆ,
ಬ್ರಹ್ಮನಾಗಿ ಸೃಷ್ಟಿಸಿದೆ, ಲಯಕಾಗಿ ಶಿವನಾದೆ.

ಮಾನಸ ಸರೋವರದ ತಟದಲಿ ಶಿವನಾಗಿ ನೆಲೆಸಿದೆ,
ನಿಶ್ಕಲ್ಮಶ ಕ್ಷೀರಸಾಗರದಲಿ ವಿಷ್ಣುವಾಗಿ ನೆಲೆಸಿದೆ,
ಮಾನವ ದೇಹದ ಉತ್ತುಂಗದಲಿ ಮನಸಾದೆ,
ಅಪೂರ್ಣ ಒಗಟುಗಳಿನ್ನೂ ಇರಲು ಬಹ್ಮ-ವಿಷ್ಣು-ಶಿವನಾದೆ.