Saturday, January 17, 2009

ವಾನಪ್ರಸ್ಥ

ಜ್ಞಾನದ ಬೆಳಕಿನಲಿ ಜೀವನವ ಸವೆಸಲು,
ನವೀನ ಸಂಬಂಧಗಳ ಕೊಂಡಿಗಳನು ಬೆಸೆಯಲು,
ಜಗದಿ ತನ್ನ ಗುರುತನು ಉಳಿಸಲು ಪ್ರಾಯಸ್ಥ,
ಆಸೆಗಳ ಗೆಲ್ಲಲು ಹವಣಿಸುವವ ಗೃಹಸ್ಥ.

ತಾ ಬೆಸೆದ ಕೊಂಡಿಗಳನು ಕಳಚುತಾ,
ಆಸೆಗಳಿಂದ ವಿಮುಖನಾಗಿ ಬೆಳೆಯುತಾ,
ಆತ್ಮಜ್ಞಾನವ ಪಡೆದರೆ ಪರಮಾರ್ಥಿ,
ನಾಂದಿ ಹಾಡಿದವ ವಾನಪ್ರಸ್ಥ.


ವೈಭವಗಳ ತಾ ಮರೆತು ಸನ್ಯಾಸಿಯಾಗಲು ಹವಣಿಸುವವ,
ಸೋತುಬಿಡಲೇ ಎನ್ನುವ ಮನಸನು ನಿಗ್ರಹಿಸುವ,
ಅಳುಕಿನ ಬಂದಿಯಾಗದೆ,ನಲಿವಿನ ದಾಸನಾಗದೆ,
ನಿರಪೇಕ್ಷಿತನಾಗಲು ಪಲ್ಲವಿಯ ನೀ ಹಾಡಿದೆ.

ಧೈರ್ಯವಿರಬೇಕು ಮೇಣದ ಮನಸನು ಕಲ್ಲಾಗಿಸಲು,
ಜೀವನ್ಮೋಹದ ಜ್ವಾಲೆಯಿಂದ ದೂರವಿರಿಸಲು,
ಮೋಹಿತನಾಗದೆ ಮೋಹವನ್ನು ದೂರವಿಡುವ,
ಸನ್ಯಾಸದ ನಾಂದಿ ಹಾಡುವ ಧೈರ್ಯಸ್ಥ ಈ ವಾನಪ್ರಸ್ಥ.

ಆಸೆಯ ದಾಸನಿಂದ ಆಸೆಯ ಗುರುವಾಗಲು,
ಬಿಸಿರಕ್ತದ ಗೃಹಸ್ಥನಿಂದ ತಾಳ್ಮೆಯ ಪರಮಾರ್ಥಿಯಾಗಲು,
ವೈರುಧ್ಯಗಳ ನಡುವಿನ ಪಯಣವಲ್ಲ ಸುಲಭ,
ದಿಗಂತಕೆ ಹೊರಟಂತೆ ಕಾಣಲು ಕಲೆತ ಪೃಥೆ-ನಭ.


ಮಾಯೆಯ ಬಿಸಿಲ್ಗುದುರೆಯಿಂದ ಮೇಲೇರಿ ಬಂದು,
ಸೂಸುತ ಜ್ಞಾನದ ಸ್ಫಟಿಕ ಕಿರಣಬಿಂದು,
ಕ್ಷಣಕ್ಷಣದಲ್ಲೂ ಮನವನು ಕಠೋರವಾಗಿಸುತ,
ಅಂತರಂಗ ಬಹಿರಂಗವನು ಶುದ್ಧಗೊಳಿಸುತಾ.


ಗೃಹಸ್ಥನಾದೊಡೆ ಮನೋನಿಗ್ರಹ ಕಷ್ಟ,
ಸನ್ಯಾಸಿಯಾದೊಡೆ ಕಾಯ್ದುಕೊಳ್ಳಲು ಕಷ್ಟ,
ಅರಿಷಡ್ವರ್ಗಗಳ ಮೆಟ್ಟುವ ಪಯಣವಿನ್ನೂ ಕಷ್ಟ,
ಅದನೇ ಮಾಡುವವ ವಾನಪ್ರಸ್ಥ ಮರೆತು ತನ್ನೆಲ್ಲ ಅಭೀಷ್ಟ.

ಅವಲಂಬಿತರನು ಪೋಷಿಸಬೇಕು,ಬಾಹ್ಯ ಜ್ಞಾನವ ರಕ್ಷಿಸಬೇಕು,
ಪ್ರೀತಿಪಾತ್ರರಲಿ ಸೋಲಬೇಕು, ಬಾಹ್ಯ ಜೀವನದಿ ಗೆಲ್ಲಬೇಕು,
ಇದನು ಸಾಧಿಸಲು ಆಗಬೇಕು ನಾ ಅನಿವಾರ್ಯ ಗೃಹಸ್ಥ,
ಆದರೂ ಮನದಲಿ ಇಚ್ಚಿಸಿರುವೆ ನಾ ಆಗಲು ನಿರಂತರ ವಾನಪ್ರಸ್ಥ.