Monday, February 24, 2014

ಆ ಭೇಟಿ

ಗುಟ್ಟುಗಳ ಭ್ರೂಣದಲಿ ಜನಿತನಾದವನೋ,
ನೀ ರಹಸ್ಯನೋ, ನಕ್ಷತ್ರಕ ನಾಯಕನೋ,
ಕೊರಗಿನ ಕಪ್ಪಿನಲಿ ಮಿಂದೆದ್ದ ರಕ್ಕಸನೋ,
ಜಗ ಜರೆದ ಭಾಗ್ಯದಲಿ ರಹಸ್ಯನಾದವನೋ.

ಜನುಮದಾತನಿಗೂ ಬೇಡದ ಅನಾಥನಾಗಿ,
ಪಾಪಪ್ರಜ್ಞೆಯ ಛಾಯೆಯಲಿ ಬಲಿಷ್ಠನಾಗಿ,
ಅಂತರಾಳದ ಗ್ರಹಣವೇ ನೀನಾಗಿ, ಗಹಗಹಿಸಿದಂತೆ,
ಕರಾಳತೆಯ ಒಂದು ಮುಖ ನಿನ್ನದು, ಪ್ರತಿಬಿಂಬದಂತೆ.

ಎಲ್ಲ ಮನಸಲೂ ಅವಿತಿರುವ ಚೋರ,
ಎಲ್ಲ ಮನಸುಗಳನೂ ಆವರಿಸಿರುವ ಪೋರ,
ಸಮಯ ಸಾಧಕನಾಗಿ ಕುಳಿತಿರುವ ಕ್ರೂರ,
ನಿನ್ನ ಭೇಟಿಯು ಬೇಡ, ನೀನಿರು ದೂರ.

ಆ ನಿನ್ನ ಭೇಟಿಯನು ತಡೆಯುವೆವು, ಮುಂದೂಡುವೆವು,
ಆರ್ತವಾಗಿ ಮೊರೆ ಹೋಗುವೆವು, ದೇವರಿಗೋ ಮಾಯೆಗೋ,
ಆದರೆ ನೀ ಹುಣ್ಣಿನಂತೆ, ನೆತ್ತರಿಲ್ಲ ಬರಿಯ ಕೀವು,
ಜಗಕೆ ಕಾಣುವುದಿಲ್ಲ ಮನದ ಅಸಾಧ್ಯ ನೋವು.

ನಿಜ, ಆ ಭೇಟಿಯಾಗಲೇ ಬೇಕು,
ನೀನು ನಾನು ಮುಖಾಮುಖಿಯಾಗಲೇ ಬೇಕು,
ಧೈರ್ಯದ ಹೊನಲಿನಲಿ, ಕ್ಷಮೆಯ ಶರಧಿಯಲಿ,
ನನ್ನ ಕರಾಳ ಪ್ರತಿಬಿಂಬವ ತೊಳೆಯಲೇಬೇಕು.

ಮರೆತೆ ನಾನು, ಆ ಭೇಟಿಯು ಕೊಡಲಿಯೆಂದು,
ಮನಡೊಳು ಹಬ್ಬಿದ ಕೊರಗು ಬಳ್ಳಿಯ ಮೃತ್ಯುವೆಂದು,
ನಿನ್ನ ದಶಾನನ ರಾಜ್ಯದ ಮುಕ್ತಿಯೊಳಿಂದು,
ನಿನ್ನಾಟದ ಪರದೆಯ ಎಳೆದೆನು - ಹೊಸ ಗುಟ್ಟಿಗಾಗಿ,
ಹೊಸತೊಂದು ರಹಸ್ಯವಾಗಿ, ನೀ ಮತ್ತೆ ಹುಟ್ಟಲೆಂದು.