Wednesday, December 24, 2008

ದ್ವಂದ್ವ

ಉದ್ಧಟ ಮನದ ಆರ್ಭಟವಿರಲು,
ಧರ್ಮಾಧರ್ಮದ ಗೊಂದಲವಿರಲು,
ಸರಿಯಾದ ದಾರಿಯ ಹುಡುಕುತ ಕೂರುವೆವು,
ನಿರ್ಧರಿಸಲಾಗದು ಅದುವೇ ದ್ವಂದ್ವವು.

ಬಾಳದಾರಿಯಲಿ ಅನೇಕ ಕವಲುಗಳು,
ದ್ವಂದ್ವ ದರ್ಶನವ ನೀಡುವ ಕವಲುಗಳು.
ಆರಿಸಿದ ಹಾದಿಯೇ ಬಾಳಿನ ಸತ್ಯವು.
ಮಿಥ್ಯವೇ ಸರಿಯಾದ ಬಗೆಗಳು ಹಲವು.

ಅಹಂಕಾರದ ದೀಪವು ನಮ್ಮೊಳು ಉರಿಯಲು,
ಸಾಧನೆಗೈಯುವ ಹುಮ್ಮಸ್ಸನು ನೀಡಲು,
ನಾನು ನಾನೆಂಬ ಅಹಂಕಾರವ ಇಲ್ಲದಿರೆ,
ಯಾರಿಗಾಗಿ ನಾ ಸಾಧಿಸಲಿ ಹೇಳು ದೊರೆ?

ಅಹಂಕಾರದ ದೀಪಕೆ ಹಠವೇ ಜೀವವು,
ಹಠವಿಲ್ಲದಿರೆ ನಾವಿದ್ದರೂ ನಿರ್ಜೀವ,
ನಮ್ಮಲಿ ಹಠದ ಹರಿವಿರದಿದ್ದರೆ,
ನಮಗೆ ನಾವೇ ಆಗುವೆವು ಹೊರೆ.

ಧರ್ಮವೋ ಮಿತ್ರನೋ ಎಂಬ ಪ್ರಶ್ನೆಯಲಿ,
ಮಿತ್ರನನು ಆರಿಸಿದ ಪ್ರಮೇಯಗಳೆಷ್ಟೋ?
ಮಿತ್ರನೇ ತಪ್ಪಾಗಿದ್ದ ಪಕ್ಷದಲಿ,
ನಮ್ಮ ತಪ್ಪನ್ನು ಒಪ್ಪಿಕೊಂಡ ವಿಧಗಳೆಷ್ಟೋ?

ಸರಿ ತಪ್ಪುಗಳ ದರ್ಶನವಿರದೆ ನಾವು,
ಕಾಲಕನುಗುಣವಾಗಿ ನಡೆಯುವೆವು ನಾವು,
ನಮ್ಮ ಪ್ರತಿಯೊಂದು ನಿರ್ಧಾರವು,
ದ್ವಂದ್ವವ ದಾಟಿ ಬಂದ ಪ್ರಮೇಯವು.

ಕವಲುಗಳೇ ನಿರ್ಧಾರಗಳೇ ಜಗದ ಶಕ್ತಿಯು,
ನಿನ್ನ ತಪ್ಪುಗಳಲ್ಲೇ ಭಗವಂತನ ಯುಕ್ತಿಯು.
ಜೀವನದ ಸುಂದರ ದರ್ಶನ ಈ ಕವಲು,
ಜೀವನ ಮಾಯಾಸುಳಿಯ ಒಡಲು.

ಗೆಲುವು ನೋಡಿದರೆ ಹರುಷದ ಆಗರ,
ಸೋಲು ಕಂಡರೆ ಕಲಿಕೆಯ ಭಂಡಾರ,
ಇದುವೇ ನಮ್ಮ ಜೀವನದ ದ್ವಂದ್ವ,
ಇದಿಲ್ಲದೇ ಜೀವನ ಹರುಶವಿರದ ಪರ್ವ.

Thursday, December 11, 2008

ನಿನ್ನ ಒಂದು ಹಠವು

ಮನದ ಮೂಲೆಯಲಿ ಕತ್ತಲ ಕೋಣೆಯಲಿ,
ಸುಂದರ ಘಳಿಗೆಯಲ್ಲಿ ಆಸೆ ಮೂಡಿದೆ.
ಬಿಸಿಯ ರಕ್ತದ ಗೆಲುವಿನ ಓಟದಲಿ,
ನೀನರಿಯದೆ ಆಸೆ ಹಠವಾಗಿ ಮಾರ್ಪಟ್ಟಿದೆ.

ನನ್ನ ರಭಸವ ನೀ ತಡೆದು ನೋಡು,
ನಾನಿಲ್ಲದೆ ಜಗದೊಳು ಗೆಲ್ಲುವವರಾರು,
ಭಯವನ್ನೇ ನಾ ಹೆದರಿಸುವೆ,
ಮಿಕ್ಕವರನ್ನು ನಾನು ಇನ್ನೆಲ್ಲಿ ಬಿಡುವೆ?

ಆಸೆಯ ಮಳೆಗೋ ವಯಸಿನ ಹದಕೋ,
ನಿನ್ನೊಳಗಿನ ಅಸುರನು ಎದ್ದಿಹನು,
ಹಠವೆಂದು ಹೆಸರಿಸಿ, ಮನಸನು ಚಿವುಟಿಸಿ,
ಗೆಲುವಿನ ನಗುವನು ನಕ್ಕಿಹನು.

ನಿನ್ನ ನಗುವಿನಲಿ ನನ್ನ ವಿರಹವಿದೆ,
ನನ್ನ ಅಶ್ರುವನು ನೀ ಪ್ರವಹಿಸಿದೆ.
ಪುನಃ ಪುನಃ ಕರೆದು ನಾ ಕೆಂಪಾದೆ,
ಹರಿವ ನೀರನ್ನು ನಾ ತಡಿಯಲಾಗದೆ.

ಹರಿವ ಓಟದಲಿ ನಿಲ್ಲಲು ನಾನು,
ಹೋಗಬೇಡೆಂದು ಹೇಳುವ ಕಣ್ಣು,
ಒಗ್ಗಟ್ಟಾಗಿ ಹರಿದರೂ ಇನ್ನು,
ನಿನ್ನೆದುರು ನಾ ಮಾಡಲಿ ಏನು?

ಹಾರುವ ನನ್ನಯ ಪರ ನೀ ಹರಿದೆ,
ನನ್ನೊಳು ಆಸೆಯ ಭಾರವ ಮೂಡಿಸಿದೆ,
ನೀ ನನಗೆ ಬೇಡವೆಂದು ನಾ ಓಡಿದರೆ,
ಕಣ್ಣೀರ ಹನಿಯ ಒದ್ದೆಯು ಹಿಂದೆಳೆದಿದೆ.

ಜೀವಕೆ ನಾನು ಬಹಳ ಅವಶ್ಯವೇ,
ಮೂಗಿನೊಳು ಬರಿಯ ಬಿಸಿಯ ಅನುಭವವೇ,
ಹಿಡಿದಿಹೆ, ನಿಟ್ಟುಸಿರ ಬಿಡುತಿರುವೆ,
ತಡೆಯಲಾಗದೆ ಭಾರವ ನಾ ಎಂದೋ ನಿಲ್ಲುವೆ.

ಹಸಿರು ಗಿಡವಾಗಿದ್ದೆ ನಾನು,
ಮರವಾಗಿ ಬೆಳೆಯಬೇಕೆಂದಿದ್ದೆ ನಾನು,
ಚಿವುಟಿದೆಯಾ ನನ್ನ, ಮೊಟಕಿದೆಯಾ ಎನ್ನ,
ದುಷ್ಟ, ಹೇಳು ಯಾರು ಹೊಡೆವರು ನಿನ್ನ.

ಎನಗೆ ಸಾವು ಎಲ್ಲಿದೆ, ಮನವು ನನ್ನ ಕೈಲಿದೆ,
ನಿಮ್ಮ ದುಃಖ ವಿಷಾದಕೆ ನನ್ನ ಥೂ ಇದೆ.
ನನ್ನ ಬಾಳ ಪಯಣಕೆ ನೀವೇ ಮೆಟ್ಟಿಲು,
ಮೇಲೆ ನಿಂತ ಗೆಲುವ ಕೈಗೆ ನನ್ನ ತೊಟ್ಟಿಲು.

ಮೇಲಿನ ಮಾತನು ಕೇಳಿದಿರಲ್ಲವೇ,
ಎಲ್ಲಿಯದೆಂದು ತಿಳಿಯಲಿಲ್ಲವೆ ?
ಹಾಕಿರಿ ಯೋಚನೆಯ ಮಣೆಯನು,
ಮನದೊಳಗೆ ಕಾಣುವಿರಿ ಉತ್ತರವನ್ನು.

ಕಣ್ಣಿನ ವಿರಹವು, ಕಣ್ಣೀರ ಓಟವು,
ಹಾರುವ ಮನದ ಪರಿತಾಪವು,
ಉಸಿರಿನ ಬಿಸಿಯೂ, ಭಾವನೆಯ ಹಂಸಗಾನವು,
ನಿನ್ನದಲ್ಲದ ಮನಸಿನ ನಿನ್ನಯ ಕರ್ಮಗಳಿವು.

ಆಸೆಯು ಮುರಿದೊಡೆ ಅಳುವೇ ನೀನು,
ಗೆಲ್ಲಲು ನೂರಾರು ಮನಸುಗಳ ಮುರಿಯುವೆ ನೀನು,
ಗೆಲುವಿನ ಹಿಂದಿನ ಕಣ್ಣೀರು ಕಾನದಾದವು,
ಅಟ್ಟಹಾಸದಿ ನಗುತಲಿರಲು ನಿನ್ನ ಒಂದು ಹಠವು.....